Tuesday, September 24, 2019

"ಜೀವನವದೊಂದು ಕಲೆ" - ಸೂರ್ಯಪ್ರಕಾಶ್ ಪಂಡಿತ್


ಜೀವನ ಅಂದರೇನು ? ಕಲೆಯೆಂದರೇನು ? ಇವೆರಡೂ ಒಂದಕ್ಕೊಂದು ಪೂರಕವೇ ? ಅಥವಾ ಜೀವನವೆಂಬ ಜೀವನದ ವ್ಯಾಪ್ತಿಯೊಳಗೆ ಕಲೆಯೂ ತನ್ನ ಅಸ್ತಿತ್ವ ವನ್ನು ಕಂಡುಕೊಳ್ಳುತ್ತದೆಯೇ ? ಇನ್ನೂ ಹತ್ತು ಹಲವು ಪ್ರಶ್ನೆಗಳು ಪ್ರಜ್ಞಾವಂತ ಮನಸ್ಸನ್ನು ಕಾಡದಿರದು. ಸೂರ್ಯಪ್ರಕಾಶ ಪಂಡಿತರ "ಜೀವನವದೊಂದು ಕಲೆ " ಪುಸ್ತಕ ಈ ಯಾವುದೇ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುವುದಿಲ್ಲ. ಬದಲಾಗಿ ನಮ್ಮ ಪರಂಪರೆಯಲ್ಲಿ ಈ ಪ್ರಶ್ನೆಗಳು ಎದ್ದಾಗ ಅದನ್ನು ಪರಂಪರೆ ಉತ್ತರಿಸಿದ ರೀತಿ , ಅದು ನೀಡಿದ ಸಮಜಾಯಿಷಿ, ಅದು ಅನುಸರಿಸಿದ ಕಾರ್ಯವಿಧಾನವನ್ನು ಎಲ್ಲರಿಗೂ ದಕ್ಕುವಂತೆ ಆಪ್ತವಾಗಿ ವಿವರಿಸುತ್ತದೆ. ಇದರಿಂದ ಆಗುವ ಲಾಭವಾದರೂ ,ಪರಂಪರೆಯ ಹಿನ್ನಲೆಯಲ್ಲಿ ಪ್ರಶ್ನೆಗಳಿಗೆ ಉತ್ತರಗಳು ನಮ್ಮಲ್ಲಿಯೇ ವಿಕಾಸಗೊಳ್ಳುತ್ತಾ ಸಾಗುತ್ತದೆ . ಇದು ಕಗ್ಗದಲ್ಲಿ ಹೇಳಿರುವ "ಆ ವಿವರ ನಿನ್ನೊಳಗೆ " ಎಂಬ ಮಾತಿಗೆ ಪೂರಕವಾದದ್ದು.
ಜೀವನವನ್ನೇ ಕಲೆಯಾಗಿಸಿಕೊಂಡು ಬದುಕಿದ ಇಬ್ಬರು ಮಹನೀಯರು DVG ಮತ್ತು ಆನಂದ ಕುಮಾರಸ್ವಾಮಿ. ಅವರ ಬರೆಹದ ಹೊಳಹುಗಳು ಪುಸ್ತಕದಲ್ಲಿ ಎಲ್ಲಿಯೂ ಕಾಣಸಿಗುತ್ತದೆ. ಪುಸ್ತಕದಲ್ಲಿನ ಪ್ರವೇಶಿಕೆ ಮತ್ತು  ಅಂತ್ಯದ ಟಿಪ್ಪಣಿಗಳು , ಪುಸ್ತಕದಲ್ಲಿರುವ ಲೇಖನಗಳನ್ನು ಓದುವ ಕ್ರಮಕ್ಕೆ ಮಾರ್ಗದರ್ಶಿಗಳಾದರೆ, ಲೇಖನಗಳು, ಕಲಾ ಮತ್ತು ಜೀವನ ಮೀಮಾಂಸೆಗಳನ್ನು ಪ್ರವೇಶಿಸಲು ಉತ್ತಮ ಮೆಟ್ಟಿಲನ್ನು ಕಟ್ಟಿಕೊಡುತ್ತವೆ. ಒಟ್ಟಿನಲ್ಲಿ , ನಾವೆಲ್ಲಾರೂ "ಆ ವಿವರ ನಮ್ಮೊಳಗೆ " ಸೃಜಿಸಿಕೊಳ್ಳಲು ಬೇಕಾದ ಸರಕನ್ನು ಒದಗಿಸಿರುವ ಪಂಡಿತರಿಗೆ ಧನ್ಯವಾದಗಳು.

- ಶಶಾಂಕ್ ಪರಾಶರ್

No comments:

Post a Comment